ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ 94 ಸಿಸಿ ಯಲ್ಲಿ ಸುಮಾರು 3 ಸಾವಿರ ಮನೆಗಳಿಗೆ ಹಕ್ಕು ಪತ್ರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೊಡಿಸುವುದಾಗಿ ಶಾಸಕ ಜೆ.ಆರ್.ಲೋಬೊ ತಿಳಿಸಿದರು. ಅವರು ಇಂದು ತಮ್ಮ ಕಚೇರಿಯಲ್ಲಿ 94 ಸಿಸಿಯ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು.

ಈಗಾಗಲೇ 30×40 ಅಡಿಯ ಮನೆಯ ಸರ್ವೇ ಕೆಲಸವನ್ನು ಅಧಿಕಾರಿಗಳು ಮಾಡಿದ್ದು ಈ ಕಾರ್ಯದಲ್ಲಿ ವಿಳಂಭ ಆಗಬಾರದು. ಮುಖ್ಯಮಂತ್ರಿಗಳನ್ನು ಆಹ್ವಾನಿಸಬೇಕು. ಬಹುತೇಕ ಆಗಸ್ಟ್ ತಿಂಗಳ ಕೊನೆಯೊಳಗೆ ಮುಖ್ಯಮಂತ್ರಿಯವರು ಬರುವ ಕಾರ್ಯಕ್ರಮವಿದೆ. ಅದಕ್ಕೂ ಮೊದಲು ಎಲ್ಲಾ ಕೆಲಸಗಳನ್ನು ಮುಗಿಸುವಂತೆ ಸೂಚಿಸಿದರು.

ಬೆಂಗ್ರೆ, ಬಜಾಲ್, ಪಡೀಲ್ ಮುಂತಾದ ಕಡೆಗಳಲ್ಲಿ ಅಧಿಕಾರಿಗಳು ಸರ್ವೇ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದು ಬಡವರಿಗೆ ಪ್ರಯೋಜನವಾಗುವ ಕಾರ್ಯಕ್ರಮ. ಮುಖ್ಯಮಂತ್ರಿಗಳು ಕೂಡಾ ಆಸಕ್ತಿವಹಿಸಿ ತುರ್ತಾಗಿ ಆಗುವಂತೆ ಆದೇಶಿಸಿದ್ದಾರೆ. ಇದನ್ನು ಅಧಿಕಾರಿಗಳು ಕೂಡಾ ಮನಗಾಣಬೇಕು ಎಂದು ತಿಳಿಸಿದ ಶಾಸಕ ಜೆ.ಆರ್.ಲೋಬೊ ಇನ್ನೂ ಮನೆಯ ವಿಸ್ತೀರ್ಣ ಹೆಚ್ಚಾಗುತ್ತದೆ ಎಂದು ಕಾಯಬೇಡಿ. ಬಂದಿರುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ತಿಳಿಸಿದರು.

ಈ ಕಾರ್ಯಕ್ರಮದೊಂದಿಗೆ ಇನ್ನಿತರ ಕಾರ್ಯಕ್ರಮ ರೂಪಿಸಬೇಕು. ಬಡವರಿಗೆ ಕೊಡಬೇಕಾಗಿರುವ ವಿಧವಾ ವೇತನ. ಪಿಂಚಣಿ ಮುಂತಾದವುಗಳ ಬಗ್ಗೆಯೂ ಪರಿಶೀಲಿಸಿ ಏಕರೂಪದಲ್ಲಿ ಎಲ್ಲವನ್ನೂ ಕೊಡುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಈ ಸಭೆಯಲ್ಲಿ ಸಹಾಯಕ ಕಮಿಷನರ್ ರೇಣುಕಪ್ರಸಾದ್, ತಹಶೀಲ್ದಾರ್ ಮಹಾದೇವಪ್ಪ ಮುಂತಾದವರು ಉಪಸ್ಥಿತರಿದ್ದರು.