ಮಂಗಳೂರು: ನಗರದಲ್ಲಿ 250 ಕ್ಕೂ ಹೆಚ್ಚು ಹಮಾಲಿ ಕಾರ್ಮಿಕರಿದ್ದು ಅವರಿಗೆ ಐಡಿ ಕಾರ್ಡ್ ಕೊಡುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮತ್ತು ಎಪಿಎಂಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಜೆ.ಆರ್.ಲೋಬೊ ಅವರು ತೀವೃ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಇಂದು ಮಲ್ಲಿಕಟ್ಟೆ ಕಚೇರಿಯಲ್ಲಿ ಹಮಾಲಿ ಕಾರ್ಮಿಕರು, ಎಪಿಎಂಸಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಐಡಿ ಕಾರ್ಡ್ ಕೊಡುವ ಬಗ್ಗೆ ಚರ್ಚೆ ಮಾಡಿದರು.

ಈ ಎರಡೂ ಇಲಾಖೆ ಅಧಿಕಾರಿಗಳು ಕುಳಿತು ಯಾವ ರೀತಿ ಐಡಿ ಕಾರ್ಡ್ ಕೊಡಬಹುದು ಎಂಬ ಬಗ್ಗೆ ವಿಚಾರ ಮಾಡಬೇಕು. ಆದರೆ ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕಾದ ಇಲಾಖೆ ಏನೂ ಕೆಲಸ ಮಾಡದೇ ಇಷ್ಟು ಕಾಲ ಕುಳಿತದ್ದೂ ಹೇಗೆ ಎಂದು ಪ್ರಶ್ನಿಸಿದ ಅವರು ತಾವು ಇದೇ ಅಧಿವೇಶನದಲ್ಲಿ ಹಮಾಲಿ ಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆ ಹಾಗೂ ಅವರಿಗೆ ಐಡಿ ಕಾರ್ಡ್ ಕೊಡದಿರುವ ಬಗ್ಗೆ ಪ್ರಶ್ನೆ ಕೇಳುವುದಾಗಿ ತಿಳಿಸಿದರು.

ಯಾವುದೇ ಕಾರ್ಮಿಕರಿಲ್ಲದೇ ಎಪಿಎಂಸಿ ನಡೆದದ್ದು ಯಾವ ಕಾರಣಕ್ಕೆ ಮತ್ತು ಅಧಿಕಾರಿಗಳು ಇದ್ದೂ ಕೂಡಾ ಹಮಾಲಿ ಕಾರ್ಮಿಕರು ಯಾವುದೇ ಸೌಲಭ್ಯಗಳಿಲ್ಲದೇ ದಿನಕಳೆಯುವಂತಾಗಿರುವುದು ನಿಜಕ್ಕೂ ಆಶ್ಚರ್ಯ ಕರ ಎಂದು ಹೇಳಿದ ಶಾಸಕ ಜೆ.ಆರ್.ಲೋಬೊ ಅವರು ಕಾನೂನು ಏನು ಹೇಳುತ್ತದೆ ಎಂಬುದನ್ನು ತಮಗೆ ನೀಡಿ ಎಂದರು.

ಹಮಾಲಿ ಕಾರ್ಮಿಕರಿಗೆ ಐಡಿ ಕಾರ್ಡ್ ಕೊಡುವ ತನಕ ಸುಮ್ಮನಿರುವುದಿಲ್ಲ. ಕಾರ್ಮಿಕ ಇಲಾಖೆ ಮತ್ತು ಎಪಿಎಂಸಿ ಇಲಾಖೆಗಳು ಜೊತೆ ಸೇರಿ ಯಾವ ರೀತಿ ಈ ಕಾರ್ಮಿಕರಿಗೆ ಸಹಾಯ ಮಾಡಬಹುದು ಎನ್ನುವುದನ್ನು ನಿರ್ಧರಿಸಿ ನ.27 ರಂದು ಮತ್ತೊಮ್ಮೆ ಸಭೆ ಕರೆಯುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಕಾರ್ಮಿಕ ಇಲಾಖೆ, ಎಪಿಎಂಸಿ ಇಲಾಖೆ ಮತ್ತು ಹಮಾಲಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.