ಮಂಗಳೂರು: ಸರ್ಕಾರದ ಆರೋಗ್ಯ ಇಲಾಖೆಯ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದಕ್ಕೆ ಅರೋಗ್ಯ ತಪಾಸಣೆ ಶಿಬಿರಗಳು ಉಪಯುಕ್ತವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ದಕ್ಷಿಣ ವಿಧಾನ ಸಭಾ ವ್ಯಾಪ್ತಿಯ ದೇರೆಬೈಲ್ ವಾರ್ಡ್ ನ ಸರ್ಕಾರಿ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದಕ್ಷಿಣ ವಿಧಾನ ಸಭಾ ವ್ಯಾಪ್ತಿಯಲ್ಲಿ ಇದು 19 ನೇ ಆರೋಗ್ಯ ಶಿಬಿರವಾಗಿದ್ದು ಜನರು ಈ ಯೋಜನೆಯ ಉಪಯೋಗ ಪಡೆದಿದ್ದಾರೆ ಎಂದ ಅವರು ಜನರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗವನ್ನು ಪ್ರಾಥಮಿಕ ಹಂತದಲ್ಲಿ ತಡೆಯಲು ಸಾಧ್ಯವಾಗುತ್ತಿದೆ ಎಂದರು.

ಈ ಶಿಬಿರದಲ್ಲಿ ಎ.ಜೆ.ಆಸ್ಪತ್ರೆ, ಕೆ.ಎಂ.ಸಿ, ಫಾದರ್ ಮುಲ್ಲರ್ಸ್, ಜಿಲ್ಲಾ ಆರೋಗ್ಯ ಕೇಂದ್ರ, ಆಯುಷ ಸಂಸ್ಥೆಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ರಾಧಾಕೃಷ್ಣ, ಆರೋಗ್ಯ ಸಮಿತಿಯ ಪ್ರಭಾಕರ ಶ್ರೀಯಾನ್, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ವಾರ್ಡ್ ಅಧ್ಯಕ್ಷ ಉಮೇಶ್ ಕೋಟ್ಯಾನ್, ಆರ್ಕಿಟೆಕ್ ಬಾಬಾ ಅಲಂಕಾರ್, ಹರೀಶ್, ಮೋಹನ್ ಶೆಟ್ಟಿ ಮುಂತಾದವರಿದ್ದರು. ಗೋರ್ಧನ್ ಕಾರ್ಯಕ್ರಮ ನಿರೂಪಿಸಿದರು.