ಮಂಗಳೂರಿನ ಪ್ರಮುಖ ಪ್ರದೇಶವಾಗಿ ಮೂಡಿ ಬರುತ್ತಿರುವ ಶಕ್ತಿನಗರ ಮುಖ್ಯ ರಸ್ತೆಯ ಬಿಕರ್ನಕಟ್ಟೆ ಜಂಕ್ಷನ್ ನಿಂದ ಕೈಕಂಬ ಜಂಕ್ಷನ್ ವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ತಾ. 15.02.2018 ರಂದು ಗುದ್ದಲಿಪೂಜೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭವಿಷ್ಯದಲ್ಲಿ ಅತ್ಯಾಧುನಿಕ ಪ್ರದೇಶವಾಗಿ ಮಾರ್ಪಾಡಾಗುತ್ತಿರುವ ಶಕ್ತಿನಗರದ ಮುಖ್ಯ ರಸ್ತೆಯನ್ನು ಅಗಲೀಕರಣಗೊಳಿಸಲು ಪಾಲಿಕೆಯ ಪ್ರೀಮಿಯಮ್ ಎಫ್.ಎ.ಆರ್ ನಿಧಿಯಿಂದ ರೂ.1.12 ಕೋಟಿ ಮಂಜುರಾಗಿದೆ. ಅದಲ್ಲದೇ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ರೂ.100ಕೋಟಿ ಅನುದಾನದಿಂದ ರೂ. 91ಲಕ್ಷ ಮಂಜೂರಾತಿ ಆಗಿದೆ. ಈ ಎರಡು ಅನುದಾನದಿಂದ ರಸ್ತೆ ಅಗಲೀಕರಣ, ಚರಂಡಿ ಹಾಗೂ ಫೂಟ್ ಪಾತ್ ರಚನೆ ಕಾಮಗಾರಿ ಹಾಗೂ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ಈ ಎಲ್ಲಾ ಕಾಮಗಾರಿಗೆ ಜನರ ಸಹಕಾರ ಅತೀ ಅಗತ್ಯವಾಗಿದೆ. ರಸ್ತೆ ಅಭಿವೃದ್ಧಿಯಾದರೆ ಈ ಪ್ರದೇಶದಲ್ಲಿ ಇನ್ನೂ ಅನೇಕ ಕಟ್ಟಡಗಳು ನಿರ್ಮಾಣವಾಗಲಿದೆ. ಜನರ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಇದರಿಂದ ಜನರ ಜೀವನ ಶೈಲಿ ಉತ್ತಮಗೊಳ್ಳಲಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಶ್ರೀಮತಿ ಜುಬೈದಾ ಅಜೀಜ್, ಮಾಜಿ ಮೇಯರ್ ಅಬ್ದುಲ್ ಅಜೀಜ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ ಸುಧೀರ್, ಆಲ್ವಿನ್ ಪಾಯಿಸ್, ಸುನೀತ್ ಡೇಸಾ, ಪಾಲಿಕೆಯ ಅಧಿಕಾರಿಗಳಾದ ದೇವರಾಜ್, ಲಕ್ಷ್ಮಣ್ ಪೂಜಾರಿ, ಗುತ್ತಿಗೆದಾರ ಸುಲೈಮಾನ್ ಆಸೀಫ್ ಮೊದಲಾದವರು ಉಪಸ್ಥಿತರಿದ್ದರು.