ಪ್ರತಿಯೋಂದು ಮನೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗದತ್ತ ನೋಡುತ್ತಿರುವಾಗ, ಮಂಗಳೂರಿನಲ್ಲಿ ಉದ್ಯೋಗ ಅವಕಾಶ ಬಹಳಷ್ಟು ಕಡಿಮೆಯಾಗಿರುತ್ತದೆ. ಇಲ್ಲಿನ ಮಕ್ಕಳು ಉದ್ಯೋಗಕ್ಕೆ ವಿದೇಶಕ್ಕೆ ಮುಖಮಾಡಿಕೊಂಡಿರುತ್ತಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಶ್ರೀ.ಜೆ.ಆರ್ ಲೋಬೊರವರು ಇತ್ತೀಚೆಗೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ವಕೀಲರ ಸಂಘದ ಸಭೆಯಲ್ಲಿ ಹೇಳಿದರು. ಸುಮಾರು 150ಕ್ಕೂ ಅಧಿಕ ನ್ಯಾಯಾವಾದಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ಮಂಗಳೂರು ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೃಹತ್ ಬಂದರು, ರೈಲ್ವೆ ನಿಲ್ದಾಣಗಳು ಇದೆ. ಉದ್ಯೋಗವಕಾಶಕ್ಕೆ ವಿಫುಲವಾದ ಅವಕಾಶಗಳಿವೆ. ಇದನ್ನು ಸರಿದೂಗಿಸಲು ವಿದೇಶಿ ಬಂಡವಾಳ ಅಗತ್ಯ. ಬಂಡವಾಳಗಳು ಹರಿದು ಬಂದರೆ ಇಲ್ಲಿ ಅನೇಕ ಐಟಿ ಕಂಪೆನಿಗಳನ್ನು ಸೃಷ್ಟಿಸಬಹುದು. ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗ ಅವಕಾಶಗಳನ್ನು ಇಲ್ಲಿಯೂ ಕಲ್ಪಿಸಬಹುದು. ಪ್ರತೀ ಮನೆಯ ಮಕ್ಕಳು ಹೆತ್ತವರ ಜೊತೆ ನೆಮ್ಮದಿಯಿಂದ ಮಂಗಳೂರಿನಲ್ಲಿ ತಮ್ಮ ಜೀವನ ನಡೆಸಬಹುದು. ಇಂತಹ ಬೃಹತ್ ಉದ್ಯೋಗವಕಾಶ ಯೋಜನೆಯಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಅದಲ್ಲದೇ ಮಂಗಳೂರಿನ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ ವಾಣಿಜ್ಯ ವಹಿವಾಟು ಹೆಚ್ಚಿಸಲು ಲಕ್ಷದ್ವೀಪಕ್ಕೆ ನಿಯೋಗವನ್ನು ಕೊಂಡೊಯ್ದು ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಲಕ್ಷದ್ವೀಪ ನಡುವಣ ಜನರ ಸಂಪರ್ಕ, ವಾಣಿಜ್ಯ ವಹಿವಾಟು, ಸರಕು ಸಾಗಾಟ ಹೆಚ್ಚಳವಾಗಲಿದೆ ಎಂದರು.

ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಕರ್ನಾಟಕ ಲೋಕೊಪಯೋಗಿ ಇಲಾಖೆಯಿಂದ ಈ ಕಾಮಗಾರಿ ನಡೆಸಲಾಗಿದೆ. ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ಉದ್ಘಾಟನೆಯಾದಾಗ ಅದನ್ನು ಸಂಪರ್ಕಿಸಲು ಸರಿಯಾದ ರಸ್ತೆ ವ್ಯವಸ್ಥೆ ಇರಲಿಲ್ಲ. ಬಹಳ ಕಿರಿದಾದ ರಸ್ತೆ ಇದ್ದು, ಅದು ಇಂತಹ ದೊಡ್ಡ ಹಾಗೂ ಎತ್ತರದ ನ್ಯಾಯಾಲಯದ ಕಟ್ಟಡಕ್ಕೆ ಪೂರಕವಾಗಿಲ್ಲದಿದ್ದರಿಂದ ಅದಕ್ಕೆ ಆ ರಸ್ತೆಯನ್ನು ಅಗಲೀಕರಣಗೊಳಿಸಿ ಕಾಂಕ್ರಿಟೀಕರಣ ಮಾಡಲು ಸುಮಾರು ರೂ.12 ಕೋಟಿ ಮಂಜೂರು ಮಾಡಿಸಿದ್ದೇನೆ. ಕೆಲವೊಂದು ತಾಂತ್ರಿಕ ಅಡಚಣೆಗಳಿಂದ ಕಾಮಗಾರಿಯು ವಿಳಂಬವಾಗಿರುತ್ತದೆ. ಆದರೂ ಕಾಮಗಾರಿಯು ಸದ್ರಿ ನಡೆಯುತ್ತಲಿದ್ದು, ಆದಷ್ಟು ಬೇಗ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

ಈ ಸಂದರ್ಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ವಕೀಲರ ಸಂಘದ ಅಧ್ಯಕ್ಷರಾದ ಬಿ.ಇಬ್ರಾಹಿಂ, ಮಾಜಿ ವಕೀಲ ಸಂಘದ ಅಧ್ಯಕ್ಷರಾದ ಕಳ್ಳಿಗೆ ತಾರನಾಥ ಶೆಟ್ಟಿ, ಎ.ಸಿ.ವಿನಯರಾಜ್, ಮನೋರಾಜ್, ಸಾದಾತ್ ಅನ್ವರ್, ಅಬ್ದುಲ್ ನಝೀರ್, ಅರುಣ್ ಬಂಗೇರ, ಅನಿಲ್ ಪತ್ರಾವೋ, ಅಮೃತ್ ಕಿಣಿ. ಎಸ್.ಕೆ ಉಳ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.