ಮಂಗಳೂರು: ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಒಂದು ಮೃಗಾಲಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಇಲ್ಲಿರುವ ಕಾಳಿಂಗ ಸರ್ಪಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ ಎಂದ ಅವರು ಇಲ್ಲಿಯ ಪ್ರಕೃತಿಯನ್ನು ಪಶ್ಚಿಮ ಘಟ್ಟದ ಪರಿಸರಕ್ಕೆ ಅನುಗುಣವಾಗಿ ಬೆಳೆಸಿಕೊಂಡು ಬರಲು ಎಲ್ಲಾ ಪ್ರಯತ್ನವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಮನುಕುಲದ ರಕ್ಷಣೆಗೆ ಪ್ರಕೃತಿಯ ಮಡಿಲ್ಲಿನಲ್ಲಿ ಬೆಳೆದು ಬಂದಿರುವ ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಪಿಲಿಕುಳ ಕೇವಲ ಮೃಗಾಲಯ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಪರಿಸರದಲ್ಲಿ ಬೆಳೆದು ಬಂದಿರುವ ಸಸ್ಯ ಹಾಗೂ ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಅಧ್ಯಯನ ಕೇಂದ್ರವಾಗಬೇಕು ಎಂದು ಶಾಸಕ ಜೆ.ಆರ್.ಲೋಬೊ ನುಡಿದರು.
ಈ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಪಿಲಿಕುಳಕ್ಕೆ ನೀಡಿದ ಅಪಾರ ಸೇವೆಯನ್ನು ಸ್ಮರಿಸಿದರು.