ಮಂಗಳೂರು: ರಾಜ್ಯ ಸರ್ಕಾರ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ, ಆದ್ಯತೆಯ ಮೇರೆಗೆ ನಗರದಲ್ಲಿರುವ ಹಾಗೂ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಇವರು ಮಖ್ಯಮಂತ್ರಿ 3ನೇ ಹಂತದ ರೂಪಾಯಿ 100 ಕೋಟಿ ಅನುದಾನದ ಪದವು ಹೈಸ್ಕೂಲ್-ಶರ್‍ಬತ್ ಕಟ್ಟೆ 400 ಮೀಟರ್ ರಸ್ತೆ ಕಾಂಕ್ರೀಟಿಕರಣ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ನಗರದಲ್ಲಿ ಸುಮಾರು 15 ಅಭಿವೃದ್ಧಿಗೊಳ್ಳದ ರಸ್ತೆಗಳನ್ನು ಗುರುತಿಸಿದ್ದು, ವಿವಿಧ ಅನುದಾನದ ಮುಖಾಂತರ, ಶೀಘ್ರವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಮಾಲೋಚನೆ ಸಭೆ

ಬಳಿಕ, ಜೆಪ್ಪುವಿನಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಭಾಗವಹಿಸಿದ ಶಾಸಕ ಜೆ.ಅರ್.ಲೋಬೊ, ಕಂಕನಾಡಿ ಫಾದರ್ ಮುಲ್ಲರ್ಸ್ ಅಸ್ಪತ್ರೆಯಿಂದ ಜೆಪ್ಪು ನಂದಿಗುಡ್ಡ ರಸ್ತೆಯನ್ನು ಚತುಸ್ಪತಗೊಳಿಸಿ ಮಾದರಿ ರಸ್ತೆಯನ್ನಾಗಿ ನಿರ್ಮಿಸಲು ಅನುದಾನವು ಲಭ್ಯವಿದ್ದು, ಸ್ಥಳಿಯ ಜನರೊಂದಿಗೆ ಚರ್ಚಿಸಿ ರಸ್ತೆಯಲ್ಲಿರುವ ಬೃಹತ್ ಮರಗಳಿಗೆ ಕಡಿಮೆ ಹಾನಿಯಾಗುವ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳಿಯರ ಅಭಿಪ್ರಾಯವನ್ನು ಗಮನಕ್ಕೆ ತರುವ ದೃಷ್ಟಿಯಿಂದ ರಸ್ತೆ ಅಭಿವೃದ್ದಿ ಸಮಿತಿಗೆ ಕೆಲವರನ್ನು ಸೇರಿಸಲಾಯಿತು.

ನಗರದಲ್ಲಿರುವ ಫುಟ್‍ಪಾತ್ ಸಮಸ್ಯೆಗೆ ಈಗಾಗಲೆ ಕ್ರಮ ಕೈಗೊಂಡಿದ್ದು, ಶೀಘ್ರದ್ದಲ್ಲಿ ಬಗೆಹರಿಸಲಾಗುವುದು ಎಂದು ಸ್ಥಳಿಯರ ಪ್ರಶ್ನೆಗೆ ಉತ್ತರಿಸಿ ಹೇಳಿದರು.

ಮೇಯರ್ ಜೆಸಿಂತಾ ಆಲ್ಫ್ರೇಡ್, ಸ್ಥಾಯಿ ಸಮಿತಿಯ ಅಧ್ಯಕ್ಷ ದೀಪಕ್ ಪೂಜಾರಿ, ಕಾರ್ಪೋರೇಟರ್ ಹರಿನಾಥ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಸುಧೀರ್ ಶೆಟ್ಟಿ, ರೂಪಾ ಡಿ. ಬಂಗೇರಾ, ಪ್ರಕಾಶ್ ಆಳಪೆ, ಶೈಲಜ ಟಿ.ಕೆ, ಕವಿತಾ ವಾಸು, ಆಶಾ ಡಿ’ಸಿಲ್ವ, ಅಪ್ಪಿ, ನಾಗವೇಣಿ, ಕವಿತಾ ಸನಿಲ್, ಪಾಲಿಕೆಯ ಆಧಿಕಾರಿಗಳು ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.