ಮಂಗಳೂರು:ಬಹುನಿರೀಕ್ಷಿತ ಪುರಾತನ ಪ್ರದೇಶದ ಮುಖ್ಯರಸ್ತೆ ಎ.ಬಿ.ಶೆಟ್ಟಿ ಸರ್ಕಲ್ ನಿಂದ ಅಗ್ನಿಶಾಮಕ ಕಚೇರಿ ವರೆಗಿನ ರಸ್ತೆಯನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಮಂಗಳೂರಿನಲ್ಲಿ ಪುರಾತನ ಪ್ರದೇಶವಾದ ಇದನ್ನು ಆಧುನೀಕರಣದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಸ್ಥಳೀಯರು ನಗರಪಾಲಿಕೆ ಸದಸ್ಯರ ಮೂಲಕ ಮನವಿ ಕೊಟ್ಟು ಒತ್ತಾಯ ಮಾಡಿದ್ದರಿಂದ ತಾವು ಈ ಪ್ರದೇಶಕ್ಕೆ ಭೇಟಿಕೊಟ್ಟು ಅಧ್ಯಯನ ಮಾಡಿ ಮುಖ್ಯಂತ್ರಿಗಳ ವಿಶೇಷ ಅನುದಾನದಲ್ಲಿ 50 ಲಕ್ಷ ರೂಪಾಯಿ ಒದಗಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಈಗ ಕಾಮಗಾರಿ ನಿರ್ಣಾಯಕ ಹಂತಕ್ಕೆ ಬರಲು ಪ್ರೇರಣೆ ಯಾಗಿದೆ ಎಂದರು.

ಕಾಮಗಾರಿಯಲ್ಲಿ ಯಾವುದೇ ತೊಂದರೆ ಆಗದಂತೆ ಎಲ್ಲರ ವಿಶ್ವಾಸ ಗೆಲ್ಲುವ ನಿಟ್ಟಿನಲ್ಲಿ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ರಾಮ ಕಾಮತ್ ಅವರು 3 ತಿಂಗಳಲ್ಲಿ ಪೂರ್ಣಗೊಳಿಸುತ್ತಾರೆ ಎಂದು ನುಡಿದರಲ್ಲದೇ ಈ ಭಾಗದ ಜನರು ಬಹಳ ಕಾಲದ ನಂತರ ಸುಸಜ್ಜಿತವಾದ ರಸ್ತೆಯನ್ನು ಹೊಂದಿ, ವಾಹನಗಳ ದಟ್ಟಣೆಯಿಲ್ಲದೆ ನಿರಾತಂಕವಾಗಿ ಸಾಗಲು ನೆರವಾಗಲಿದೆ ಎಂದರು.

ಮಂಗಳೂರನ್ನು ಅತ್ಯಾಧುನಿಕ ನಗರವನ್ನಾಗಿ ಮಾಡಲು ಈ ರಸ್ತೆ ಕಾಮಗಾರಿ ಸಹಕಾರಿಯಾಗಲಿದೆ. ಇನ್ನೂ ಕೆಲವು ರಸ್ತೆಗಳನ್ನು ಆಧುನಿಕಗೊಳಿಸುವ ಬಗ್ಗೆ ತಾವು ಚಿಂತಿಸಿದ್ದು ಅವುಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸುವುದಾಗಿ ನುಡಿದರಲ್ಲೇ ಈ ಕೆಲಸಕ್ಕೆ ಎಲ್ಲರ ನೆರವನ್ನು ಯಾಚಿಸಿದರು.

ಸಮಾರಂಭದಲ್ಲಿ ಮೇಯರ್ ಹರಿನಾಥ್, ಉಪಮೇಯರ್ ಸುಮಿತ್ರ ಕರಿಯ, ನಗರಪಾಲಿಕೆ ವರ್ಕ್ಸ್ ಕಮಿಟಿ ಚೇರ್ಮನ್ ಲ್ಯಾನ್ಸಿ ಲಾರ್ಟ್ ಪಿಂಟೊ , ನಗರ ಪಾಲಿಕೆ ಮುಖ್ಯಸಚೇತಕ ಶಶಿಧರ ಹೆಗ್ಡೆ, ವಿನಯರಾಜ್, ದೀಪಕ್ ಪೂಜಾರಿ, ಅಬ್ದುಲ್ ಲತೀಫ್, ದಿವಾಕರ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಕಾಮಗಾರಿ ಗುತ್ತಿಗೆ ದಾರ ರಾಮ ಕಾಮತ್, ನಗರಪಾಲಿಕೆ ಇಂಜಿನಿಯರ್ ಲಿಂಗೇಗೌಡ, ಲಕ್ಷ್ಮಣ ಪೂಜಾರಿ ಮತ್ತಿತರರಿದ್ದರು.