ಮಂಗಳೂರು: ಸರ್ಕಾರವೇ ಕಾಲಬಳಿ ಜನರ ಸೇವೆಗೆ ಬರುವ ಕಾರ್ಯಕ್ರಮ ಲೋಕದಾಲತ್ ಒಂದು ಜನಪ್ರಿಯ ಕಾರ್ಯಕ್ರಮವಾಗಿ ಮೂಡಿಬಂದಿದ್ದು ಗ್ರಾಮಸ್ಥರ ಕಲ್ಯಾಣಕ್ಕೆ ಸದಾಸ್ಪಂದಿಸುತ್ತಿದೆ ಎಂದು ಶಾಸಕ ಜೆ.ರ್.ಲೋಬೊ ಹೇಳಿದರು. ಅವರು ಇಂದು ಪಡೀಲ್ ನ ಅಮೃತ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ಬಿ ಹೋಬಳಿ ಅಳಪೆ ವಾರ್ಡ್ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಇಚ್ಛೆಯಂತೆ ನಡೆಯುತ್ತಿರುವ ಕಾರ್ಯಕ್ರಮ ಸ್ಥಳೀಯ ಜನರ ಆಶೋತ್ತರಗಳನ್ನು ಈಡೇರಿಸುತ್ತಿದೆ. ಜನರು ಅನೇಕ ಕಾಲದಿಂದ ತಮ್ಮ ಆರ್.ಟಿಸಿ ಸಹಿತ ಕಂದಾಯ ಇಲಾಖೆಯ ದಾಖಲೆಗಳನ್ನು ಸರಿಪಡಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದವರಿಗೆ ಇದೊಂದು ಆಶಾಕಿರಣವಾಗಿ ಮಾರ್ಪಟ್ಟಿದೆ ಎಂದರು.

ಕಂದಾಯ ಇಲಾಖೆ ಪುರಾತನವಾದ ಇಲಾಖೆ. ಹುಟ್ಟಿನಿಂದ ಸಾವಿನತನಕ ದಾಖಲೆಗಳನ್ನು ಕಾಪಾಡಿಕೊಂಡು ಬರುತ್ತಿದೆ. ಜನರು ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಸುವರ್ಣ ಕಾಲ. ಜನರು ಇದರ ಪ್ರಯೋಜನ ಪಡೆದುಕೊಂಡು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶಾಸಕ ಜೆ.ಅರ್.ಲೋಬೊ ವಿನಂತಿಸಿದರು. ಕಂದಾಯ ಅದಾಲತ್ ಸಂದರ್ಭದಲ್ಲಿ ಸರ್ಕಾರದ ಅನೇಕ ಯೋಜನೆಗಳಾದ ಪಿಂಚಣಿಗಳನ್ನು ಸಹಾ ವಿತರಿಸಿದರು. ಅಂಕವಿಕಲ ವೇತನ, ವೃದ್ಧಾಪ್ಯ ವೇತನ, ಸಂದ್ಯಾಸುರಕ್ಷ ಮುಂತಾದ ಪಿಂಚಣಿಗಳ ಮಂಜೂರಾತಿ ಪತ್ರವನ್ನು ಪಡೆದುಕೊಂಡರು. ಸಮಾರಂಭದಲ್ಲಿ ತಹಶೀಲ್ದಾರ ಮಹಾದೇವ, ಕಾರ್ಪೊರೇಟರ್ ಪ್ರಕಾಶ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಶೋಭಾ ಕೇಶವ, ಕೆ.ಎಸ್.ಆರ್.ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್ ಮುಂತಾದವರು ಉಪಸ್ಥಿತರಿದ್ದರು.