ಜೂನ್ 27 ರಂದು ಸಭೆಗೆ ಶಾಸಕರು ನಿರ್ಧಾರ

ಇತ್ತೀಚೆಗೆ ನಡೆದಂತಹ ರಸ್ತೆ ಅವಘಡದಲ್ಲಿ ಶಾಲಾ ಮಕ್ಕಳು ಮೃತಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳನ್ನು ತಪಾಸಣೆ ಮಾಡುತ್ತಿರುವುದನ್ನು ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ. ಆದರೆ ಈ ತಪಾಸಣೆಯಿಂದ ಕೆಲವೊಂದು ಅಡಚಣೆಗಳು ಸಂಭವಿಸಿರುತ್ತದೆ. ಪೋಲೀಸರ ಮತ್ತು ಆರ್.ಟಿ.ಒ. ಅಧಿಕಾರಿಗಳ ತಪಾಸಣೆಗಳಿಂದ ತಪ್ಪಿಸಿಕೊಂಡು ಕೆಲವು ಚಾಲಕರು ಒಳರಸ್ತೆಗಳನ್ನು ಬಳಸಿಕೊಂಡು ಹೋಗುತ್ತಿರುವುದು ಕಂಡು ಬಂದಿರುವುದರಿಂದ, ಮಕ್ಕಳಿಗೆ ಹಾಗೂ ಪೋಷಕರು ಇದರ ಬಗ್ಗೆ ಚಿಂತೆಗೀಡಾಗಿರುತ್ತಾರೆ. ಇದರ ಪರಿಣಾಮವಾಗಿ ಒಳರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಗಳಾಗಿವೆ. ಅದಲ್ಲದೇ ಸರಿಯಾದ ಸಮಯಕ್ಕೆ ಶಾಲೆಗೆ ಮಕ್ಕಳನ್ನು ಮುಟ್ಟಿಸಲು ವಾಹನ ಚಾಲಕರಿಗೆ ಸಾಧ್ಯವಾಗುವುದಿಲ್ಲ. ನಿಯಮಕ್ಕಿಂತ ಅಧಿಕ ಮಕ್ಕಳಿದ್ದ ವಾಹನಗಳು ಸ್ವಲ್ಪ ಮಕ್ಕಳನ್ನು ಶಾಲೆಗೆ ಸ್ವಲ್ಪ ದೂರದಲ್ಲಿ ಇಳಿಸುವುದು ಕಂಡು ಬರುತ್ತಿದೆ. ಆದ್ದರಿಂದ ಈ ಸಮಸ್ಯೆಗಳನ್ನು ನೀಗಿಸಲು ಮಂಗಳೂರು ದಕ್ಷಿಣ ಶಾಸಕ ಶ್ರೀ ಜೆ.ಆರ್. ಲೋಬೊರವರಿಗೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯವರು ಮನವಿ ನೀಡಿದರು. ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಾಶಿವ ಅಮೀನ್, ಟಿ.ಕೆ. ಸುಧೀರ್, ಡೆನಿಸ್ ಡಿ’ಸಿಲ್ವ, ಸುರೇಶ್ ಶೆಟ್ಟಿ, ಪ್ರಭಾಕರ ಶ್ರೀಯಾನ್, ಶೇಖರ್ ಸುವರ್ಣ, ದುರ್ಗಾಪ್ರಸಾದ್, ನವೀನ ಬೆಂಗ್ರೆ, ಕೃತಿನ್ ಕುಮಾರ್, ಹರ್ಬಟ್ ಡಿ’ಸೋಜ ಮೊದಲಾದವರು ಉಪಸ್ಥಿತರಿದ್ದರು.

ಈ ಮನವಿಗೆ ತಕ್ಷಣ ಪ್ರತಿಕ್ರಿಯಿಸಿದ ಶಾಸಕ ಲೋಬೋರವರು ತಾ 27-06-2016 ರಂದು ಸಂಜೆ 5-45ಕ್ಕೆ ಸರಿಯಾಗಿ ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯ ಕಾಲೇಜಿನ ಸಭಾಂಗಣದಲ್ಲಿ ಶಾಲಾ ಮಕ್ಕಳ ಪೋಷಕರ/ ವಾಹನ ಚಾಲಕರ/ ಮಾಲಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಪೋಲೀಸ್ ಆಯುಕ್ತರು, ಟ್ರಾಫಿಕ್ ಪೋಲೀಸ್ ಅಧಿಕಾರಿಗಳು ಹಾಗೂ ಆರ್.ಟಿ.ಒ. ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.