ಮಂಗಳೂರು: ಮಂಗಳೂರು ನಗರ ಜೀವಿಸಲು ಪ್ರಶಸ್ತವಾದ ನಗರವೆಂಬುದಾಗಿ ಅಧ್ಯಯನ ವರದಿ ಹೇಳುತ್ತದೆ. ಸಮೀಕ್ಷೆಯಲ್ಲಿ ಅಖಿಲ ಭಾರತದಲ್ಲಿ ಮಂಗಳೂರು ನಗರಕ್ಕೆ ಒಂದನೆ ಸ್ಥಾನ, ಏಷಿಯಾ ಖಂಡದಲ್ಲಿ ಎರಡನೆ ಸ್ಥಾನ ಮತ್ತು ಜಾಗತಿಕಮಟ್ಟದಲ್ಲಿ 47 ನೇ ಸ್ಥಾನ ಸಿಕ್ಕಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ರಥಬೀದಿಯಲ್ಲಿ ಫ್ಲಾಟ್ ಮೀಟಿಂಗ್ ನಲ್ಲಿ ಶಾಸಕರು ನಿಮ್ಮಡೆಗೆ ಕುರಿತು ಮಾತನಾಡುತ್ತಿದ್ದರು. ಮಂಗಳೂರು ನಗರ ಜೀವಿಸಲು ಪ್ರಶಸ್ತವಾದ ನಗರವೆಂದು ಗುರುತಿಸಿರುವುದರಿಂದ ಇಲ್ಲಿ ಪ್ರವಾಸೋಧ್ಯಮವು ಬೆಳೆಯಲು ವಿಪುಲ ಅವಕಾಶಗಳಿವೆ. ಈಗ ನಾವು ಮಂಗಳೂರು ನಗರವನ್ನು ಪ್ರವಾಸೋಧ್ಯಮದ ಹಿನ್ನೆಲೆಯಲ್ಲಿ ಬೆಳೆಸಬೇಕಾಗಿದೆ ಎಂದರು.

ನೇತ್ರಾವತಿ ನದಿ ತೀರದಲ್ಲಿ 6 ಕೀಮಿ ದೂರಕ್ಕೆ ಪರ್ಯಾಯ ರಸ್ತೆಯನ್ನು ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ 10 ಕೋಟಿ ರೂಪಾಯಿಯನ್ನು ಮಂಜೂರು ಮಾಡಿದ್ದು ಯೋಜನೆ ವರದಿ ಸಿದ್ಧಪಡಿಸಲಾಗುತ್ತಿದೆ. ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಈ ರಸ್ತೆ ನಿರ್ಮಿಸಲಾಗುವುದು. ಇದು ಪೂರ್ಣಗೊಂಡರೆ ಕೇರಳದಿಂದ ಬರುವ ವಾಹನಗಳು ಮಂಗಳೂರಿಗೆ ಬರದೆ ಆ ರಸ್ತೆಯಲ್ಲಿ ಕಣ್ಣೂರು ತಲುಪಿ ಮುಂದುವರಿಯಲು ಅನುಕೂಲವಾಗುತ್ತದೆ. ಈ ರಸ್ತೆ ಬಂದ ಮೇಲೆ ಈ ಭಾಗದಲ್ಲಿರುವ ಭೂಮಿಯ ಮಾರಾಟವಾಗುತ್ತದೆ ಎಂದು ವಿವರಿಸಿದರು.

ಸಾಗರಮಾಲ ಯೋಜನೆಯನ್ನು ಪ್ರಸ್ತಾಪಿಸಿದ ಶಾಸಕ ಜೆ.ಆರ್.ಲೋಬೊ ಈ ಯೋಜನೆಯು ನವಮಂಗಳೂರು ಬಂದರು ಮೂಲಕ ತಣ್ಣೀರು ಬಾವಿ, ಬೆಂಗರೆ, ಹಳೆಬಂದರು ಸಂಪರ್ಕ ಸಾಧಿಸಿ ಮುಂದಕ್ಕೆ ನೇತ್ರಾವತಿ ನದಿಯನ್ನು ತಲುಪಿ ಒಂದೇ ರಸ್ತೆಯ ಮೂಲಕ ನವಮಂಗಳೂರು ಮತ್ತು ಹಳೆಬಂದರನ್ನು ಜೋಡಿಸಲು ನೆರವಾಗುತ್ತದೆ ಎಂದರು.

ಈ ಯೋಜನೆಯಾದರೆ ಬೋಳೂರಿನಿಂದ ಬೆಂಗರೆಗೆ ತೂಗು ಸೇತುವೆ ನಿರ್ಮಾಣ ಅನಗತ್ಯವಾಗಲಿದ್ದು ಅಲ್ಲಿ ಶಾಶ್ವತ ರಸ್ತೆಯನ್ನು ನಿರ್ಮಿಸಲಾಗುವುದು. ಈ ಯೋಜನೆ ಪೂರ್ಣಗೊಂಡರೆ ಪ್ರವಾಸೋಧ್ಯಮ ಕೂಡಾ ಬೆಳೆಯುತ್ತದೆ ಎಂದರು. ಮಂಗಳೂರಲ್ಲಿ ಭೂಗತ ಕೇಬಲ್ ಅಳವಡಿಕೆ ಪ್ರಾಯೋಗಿಕವಾಗಿ ಆರಂಭಗೊಂಡಿದ್ದು ಕಂಕನಾಡಿಯಿಂದ ಎ.ಬಿ.ಶೆಟ್ಟಿ ವೃತ್ತದವರೆಗೆ ರಸ್ತೆಯ ಪಕ್ಕದಲ್ಲಿ ಕೇಬಲ್ ಹಾಕಲಾಗುತ್ತಿದೆ. ಇದು ಯಶಸ್ವಿಯಾದರೆ ಮಂಗಳೂರಲ್ಲಿ ವಯರ್ ಗಳು ಮೇಲಿಂದ ತೂಗುವುದು ನಿಲ್ಲುತ್ತದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ವಿವರಿಸಿದರು.