ಮಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ನಾವು ವಿದ್ಯಾರ್ಥಿಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಉದ್ದೇಶ ಹಾಗೂ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಿಶಲ್ ಫೋರಾ ಉದಾಹರಣೆಯಾಗಿದ್ದಾರೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಕುಲಶೇಖರ ನಿವಾಸಿ ಕೆಡೆಟ್ ನಿಶಲ್ ಫೋರಾ ಡಿಅಲ್ಮೆಡ್ ಅವರನ್ನು ಗೌರವಿಸಿ ಮಾತನಾಡುತ್ತಿದ್ದರು. ಈಕೆ ಸಂತ ಅಲೋಸಿಯಸ್ ಹೈಸ್ಕೂಲ್ ನಲ್ಲಿ 9 ನೇ ತರಗತಿಯಲ್ಲಿ ವಿದ್ಯಾರ್ಥಿನಿಯಾಗಿದ್ದು ಎನ್ ಸಿಸಿ ಏರ್ ಫೋರ್ಸ್ ವಿಂಗ್ ನಲ್ಲಿ ಸೇರಿಕೊಂಡು ಕರ್ನಾಟಕ ಗೋವಾ ಪ್ರಾಂತ್ಯದಲ್ಲಿ ಅತ್ಯತ್ತಮ ಕೆಡೆಟ್ ಆಗಿ ಆಯ್ಕೆಯಾಗಿ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೆಡ್ ನಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಯಶಸ್ವಿಯಾಗುವಾಗ ನಿಜವಾಗಿಯೂ ಅವರ ಹೆತ್ತವರಿಗೆ ಸಂತಸವಾಗುತ್ತದೆ. ವಿದ್ಯಾರ್ಥಿಗಳ ಏಳಿಗೆಯಲ್ಲಿ ಹೆತ್ತವರ ಪ್ರೋತ್ಸಾಹ ಅಗತ್ಯ. ಅಸಾಧಾರಣ ವ್ಯಕ್ತಿತ್ವವನ್ನು ತೋರಿಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದ ಅವರು ಕೆಡೆಟ್ ನಿಶಲ್ ಅವರಿಗೆ ಎನ್ ಡಿಎ ಪರೀಕ್ಷೆಗೆ ಅವಕಾಶ ಲಭಿಸಲಿ. ಆಕೆಯು ಇಂಡಿಯನ್ ಏರ್ ಫೋರ್ಸ್ ನಲ್ಲಿ ಫೈಟರ್ ಪೈಲೆಟ್ ಆಗಿ ಮೂಡಿ ಬರಲಿ ಎಂದು ಹಾರೈಸಿದರು.

ಕುಲಶೇಖರ ಚರ್ಚ್ ಧರ್ಮಗುರು ವಂ. ವಿಕ್ಟರ್ ಮಚಾದೋ, ಕಾರ್ಪೊರೇಟರ್ ಜುಬೆದಾ ಬಾನು, ಥಾಮಸ್ ಡಿಸಿಲ್ವ, ವಿದ್ಯಾರ್ಥಿನಿಯ ತಾಯಿ ಎವೆರ್ಟ್ ಅಲ್ಮೇಡಾ, ಮಾಜಿ ಮೇಯರ್ ಅಬ್ದುಲ್ ಅಜೀಜ್, ಕಾಂಗ್ರೆಸ್ ಮುಖಂಡ ಅಲ್ವಿನ್ ಪಾಯಸ್ ಉಪಸ್ಥಿತರಿದ್ದರು.